ಎಲ್ಲರೂ ಕನ್ನಡದ ಸಾಹಿತ್ಯ ಜಾತ್ರೆ
ಯಶಸ್ವಿಯಾಗಲಿ ಎಂದು ಶುಭಹಾರೈಸೋಣ.
ಸಾಹಿತ್ಯ ಸಮ್ಮೇಳನಕ್ಕೆ
“ನಮ್ಮನ್ನು ಆಹ್ವಾನಿಸಲಿಲ್ಲ, ನಿಮ್ಮನ್ನು ಆಹ್ವಾನಿಸಲಿಲ್ಲ.
ಅವರನ್ನು ಆಹ್ವಾನಿಸಲಿಲ್ಲ, ಇವರನ್ನು ಆಹ್ವಾನಿಸಲಿಲ್ಲ” ಎಂದು
ಮುನಿಸಿಕೊಳ್ಳುವುದು ಬೇಡ.
ನಮ್ಮ ಮನೆಯ ಕಾರ್ಯಕ್ರಮ'
ನಮ್ಮ ಮನೆಯಂಗಳದ ಕಾರ್ಯಕ್ರಮ!!
ನಾವೆಲ್ಲರೂ ಆತಿಥೇಯರು;
ನಾವಾರೂ ಅತಿಥಿಗಳಲ್ಲ.
ಕನ್ನಡದ ಕಾರ್ಯಕ್ರಮಕ್ಕೆ
ಕನ್ನಡೇತರರು ಬಂದರೆ
ಅವರು ಅತಿಥಿಗಳಾಗುತ್ತಾರೆ.
ನಾವು ಕನ್ನಡಮ್ಮನ ಮಕ್ಕಳು,
ನಾವು ಕನ್ನಡಮ್ಮನ ಮನೆಯ ಮಕ್ಕಳು,
ನಾವೆಲ್ಲರೂ ಆತಿಥೇಯರು.
ನಾವೆಲ್ಲರೂ ಭಾರತ ಜನನಿಯ
ತನುಜಾತೆಯಾದ ಕರ್ನಾಟಕಮಾತೆಯ
ತನುಜ, ತನುಜೆಯರು &
ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು
ತನುಜರು = ಗಂಡುಮಕ್ಕಳು;
ತನುಜೆಯರು = ಹೆಣ್ಣುಮಕ್ಕಳು
ಸಾಹಿತ್ಯ ಸಮ್ಮೇಳನಕ್ಕೆ
ಆಹ್ವಾನಿಸಿದವರು ಮಾತ್ರ ಸಾಹಿತಿಗಳು;
ಆಹ್ವಾನಿಸದೆ ಇದ್ದವರು ಸಾಹಿತಿಗಳಲ್ಲ
ಎಂದೇನಿಲ್ಲವಲ್ಲ.
ಯಾರು ಸಾಹಿತಿಗಳು ಎಂಬುವುದು
ಸಾಹಿತ್ಯಕ್ಕೆ ಮತ್ತು ಸಾಹಿತ್ಯಸರಸ್ವತಿಗೆ ಮಾತ್ರ ಗೊತ್ತು.
ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ
ಇತಿಮಿತಿ ಚಿಕ್ಕದು.
ಎಲ್ಲರನ್ನೂ ಸುಧಾರಿಸುವುದಕ್ಕೆ
ಅವರಿಗೆ ಆಗುವುದಿಲ್ಲ.
ಪಾಪ, ಅವರು ಕೆಲವೊಮ್ಮೆ ಹತ್ತು ಹಲವಾರು
ಜನಗಳ ಮರ್ಜಿ, ಮುಲಾಜಗಳಿಗೆ
ನೆಲೆ, ನಿಕೇತನಗಳಾಗಬೇಕಾಗುತ್ತದೆ;
“ಯೀಲ್ಡ್” ಮತ್ತು “ಫೀಲ್ಡ್” ಆಗಬೇಕಾಗುತ್ತದೆ.
ಯಾರೂ ಬೇಸರಿಸಿಕೊಳ್ಳುವುದು ಬೇಡ;
ಎಲ್ಲವನ್ನೂ ದೊಡ್ಡದಾಗಿ ತೆಗೆದುಕೊಳ್ಳಿ.
ಸಾಹಿತ್ಯಪರ ಮನಸ್ಸುಗಳು
ಸಂಕೋಚಗೊಳ್ಳುವುದು ಬೇಡ;
ಮತ್ತವು ವಾಮನಗೊಳ್ಳುವುದು ಬೇಡ.
ಕುವೆಂಪುರವರ
“ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕಮಾತೆ”
ನಾಡಗೀತೆಯನ್ನು ಜೋರು ಜೋರಾಗಿ ಹೇಳುತ್ತ,
ಕನ್ನಡಡಿಂಡಿಮವ ಬಾರಿಸುತ್ತ,
ಡಿ. ಎಸ್. ಕರ್ಕಿಯವರ ಹಾಗೆ
“ಹಚ್ಚೇವು ಕನ್ನಡದ ದೀಪ,
ಕರುನಾಡ ದೀಪ, ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ” ಎಂದು ಹೇಳುತ್ತ
ಕನ್ನಡದ ದೀಪವನ್ನು ಹಚ್ಚಲು,
ಕನ್ನಡದ ದೀಪವನ್ನು ಬೆಳಗಲು
ಹಾವೇರಿಯತ್ತ ಪ್ರತಿಯೊಬ್ಬ ಕನ್ನಡಗರು
ಹೆಜ್ಜೆ ಇಡೋಣವಾಗಲಿ.
ಮೂರು ದಿನಗಳ ಕನ್ನಡ ಸಾಹಿತ್ಯಮ್ಮನ
ಜಾತ್ರೆಯನ್ನು ಯಶಸ್ವಿಗೊಳಿಸೋಣವಾಗಲಿ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment