Good Morning, Happy Friday
24th March 2923
@ Hiremath, TapOvanam, Tumkur
ಯುಗಾದಿ ಹಬ್ಬ ಹೊಸ ಸಂವತ್ಸರಕ್ಕೆ
“ಸುಸ್ವಾಗತ”, “ವೆಲ್ಕಮ್”,
“ಬಧಾಯೀ ಹೋ” ಹೇಳಿಯಾಗಿದೆ.
ಶೋಭಕೃನ್ನಾಮ ಅಥವಾ ಶೋಭಾಕೃತ್
ನಾಮ ಸಂವತ್ಸರ ಆಗಮಿಸಿಯಾಗಿದೆ.
ಯುಗಾದಿ ಬರೀ ಯುಗಾದಿ ಮಾತ್ರ ಅಲ್ಲ,
ಅದು ಯುಗದ ಹಾದಿ ಕೂಡ ಅಹುದು.
“ಯುಗ” ಅಂದರೆ ಇಲ್ಲಿ ಹೊಸ ಸಂವತ್ಸರ,
ನೂತನ ವರುಷ,
ನಯಾ ಸಾಲ್, ನ್ಯೂ ಇಯರ್
ಎಂದು ಅರ್ಥಮಾಡಿಕೊಳ್ಳಬೇಕು.
ಯುಗ ಎಂದರೆ ಆ ಕೃತಯುಗ, ತ್ರೇತಾಯುಗ,
ದ್ವಾಪರಯುಗ, ಕಲಿಯುಗ ಎಂದು
ಅರ್ಥಮಾಡಿಕೊಳ್ಳಬೇಡಿ
ಮತ್ತು ಆ ಯುಗಗಳ
ಆದಿ ಎಂದು ಅರ್ಥಮಾಡಿಕೊಳ್ಳಬೇಡಿ.
ಯುಗಾದಿ ಎಂದರೆ ಇಲ್ಲಿ ನೂತನ ಸಂವತ್ಸರದ
ಆದಿ ಅಥವಾ ಮೊದಲ ದಿನ ಎಂದೇ ಅರ್ಥ.
ಕೃತಯುಗ, ತ್ರೇತಾಯುಗ, ದ್ವಾಪರಯುಗ,
ಕಲಿಯುಗ ಇವೆಲ್ಲ ಒಂದೊಂದು ಕಾಲಘಟ್ಟಗಳು.
ಇವೆಲ್ಲ ಒಂದು ವರುಷದಿಂದ
ಇನ್ನೊಂದು ವರುಷಕ್ಕೆ ಬದಲಾಗುವುದಿಲ್ಲ.
ಈ ಒಂದೊಂದು ಯುಗವೂ ಸಾವಿರಾರು ವರುಷ
ಬದುಕಿಕೊಂಡಿರುತ್ತದೆ ಮತ್ತು ಬಾಳಿಕೊಂಡಿರುತ್ತವೆ.
ಅಷ್ಟು ಮಾತ್ರವಲ್ಲ,
ಇವೆಲ್ಲ ಯುಗಗಳು ಒಂದೊಂದಾಗಿ
ನಮ್ಮ, ನಿಮ್ಮಗಳನ್ನು ಸಾವಿರಾರು ವರುಷಗಳವರೆಗೆ,
ಸಹಸ್ರ ಸಹಸ್ರ ವರುಷಗಳವರೆಗೆ ಆಳಿಕೊಂಡಿರುತ್ತವೆ.
ಪಂಚಾಂಗದ ಪ್ರಕಾರ ಮತ್ತು ರಾಮಾಯಣ,
ಮಹಾಭಾರತ, ಪುರಾಣ, ಪುಣ್ಯಕಥೆಗಳ ಪ್ರಕಾರ,
ಕೃತಯುಗ ಅಥವಾ ಸತ್ಯಯುಗ -
ಈ ಯುಗವೊಂದಕ್ಕೆ ಸಾವಿರಾರು
ವರುಷಗಳ ಆಯುಷ್ಯವಿದೆ.
ತ್ರೇತಾಯುಗ ಅಥವಾ ಅರ್ಧಸತ್ಯಯುಗ -
ಈ ಯುಗವೊಂದಕ್ಕೆ ಸಾವಿರಾರು
ವರುಷಗಳ ಆಯುಷ್ಯವಿದೆ.
ದ್ವಾಪರಯುಗ ಅಥವಾ ಸತ್ಯ-ಮಿಥ್ಯ ಯುಗ -
ಈ ಯುಗವೊಂದಕ್ಕೆ ಸಾವಿರಾರು
ವರುಷಗಳ ಆಯುಷ್ಯವಿದೆ.
ಕಲಿಯುಗ ಅಥವಾ ಸಂಪೂರ್ಣ ಮಿಥ್ಯಯುಗ -
ಈ ಯುಗವೊಂದಕ್ಕೆ ಸಾವಿರಾರು
ವರುಷಗಳ ಆಯುಷ್ಯವಿದೆ.
ಇಲ್ಲೊಂದು
ಗಮನಿಸಬೇಕಾದ ಅಂಶವಿದೆ.
ಆಗಮಿಸಿದ ನೂತನ ಸಂವತ್ಸರಕ್ಕೆ
ನಾವು, ನೀವುಗಳು ಮನಸ್ಸು ಮಾಡಿದರೆ
ಈ ಮೇಲ್ಕಂಡ ಯುಗದೀಕ್ಷೆಗಳನ್ನು
ಅಂದರೆ ಕೃತಯುಗದೀಕ್ಷೆ, ತ್ರೇತಾಯುಗದೀಕ್ಷೆ,
ದ್ವಾಪರಯುಗದೀಕ್ಷೆ, ಕಲಿಯುಗದೀಕ್ಷೆಯನ್ನು
ಕೊಟ್ಟುಕೊಂಡಿರಬಹುದು.
ಮೊನ್ನೆ ತಾನೆ ಆಗಮಿಸಿದ
ಈ ಶೋಭಕೃನ್ನಾಮ ಸಂವತ್ಸರಕ್ಕೆ
ಸತ್ಯಯುಗದ ದೀಕ್ಷೆಯನ್ನು ಕೊಡಬಹುದು.
ಈ ವರುಷದ ತುಂಬೆಲ್ಲ
ಅದೇನೇ ಆದರೂ ಸರಿ,
ಅದೇನೇ ಹೋದರೂ ಸರಿ,
ನಾವು ಸತ್ಯಮಾರ್ಗದಿಂದ ವಿಚಲಿತರಾಗಲಾರೆವು
ಎಂದು ನಿರ್ಧರಿಸುವ ಮೂಲಕ
ಶೋಭಕೃನ್ನಾಮ ಸಂವತ್ಸರಕ್ಕೆ
ಸತ್ಯಯುಗ ದೀಕ್ಷೆಯನ್ನು ಕೊಡಬಹುದು.
ಶೋಭಕೃನ್ನಾಮ ಸಂವತ್ಸರಕ್ಕೆ
ನಾವು, ನೀವುಗಳು ತ್ರೇತಾಯುಗದ
ದೀಕ್ಷೆಯನ್ನು ಕೊಡಬಹುದು.
ಈ ವರುಷದ ತುಂಬೆಲ್ಲ
ಅದೇನೇ ಆದರೂ ಸರಿ,
ಅದೇನೇ ಹೋದರೂ ಸರಿ,
“ನಾವೂ ಬದುಕಬೇಕು,
ಸತ್ಯವೂ ಬದುಕಬೇಕು” ಎಂದು
ನಿರ್ಧರಿಸುವ ಮೂಲಕ
ಅರ್ಧಸತ್ಯಕ್ಕೆ “ಜೈ” ಎನ್ನುವ
ಮಾನಸಿಕತೆ ಉಳ್ಳವರು
ಶೋಭಕೃನ್ನಾಮ ಸಂವತ್ಸರಕ್ಕೆ
ತ್ರೇತಾಯುಗ ದೀಕ್ಷೆಯನ್ನು ಕೊಡಬಹುದು.
ಶೋಭಕೃನ್ನಾಮ ಸಂವತ್ಸರಕ್ಕೆ
ನಾವು, ನೀವುಗಳು ದ್ವಾಪರ ಯುಗದ
ದೀಕ್ಷೆಯನ್ನು ಕೊಟ್ಟುಕೊಂಡಿರಬಹುದು.
ಈ ವರುಷದ ತುಂಬೆಲ್ಲ ಸತ್ಯ, ಮಿಥ್ಯ
ಎರಡನ್ನೂ ನಾವು ಸಮ-ಸಮನಾಗಿ
“ಬ್ಯಾಲನ್ಸ್” ಮಾಡಿಕೊಂಡು ಇರುತ್ತೇವೆ
ಎನ್ನುವವರು ಶೋಭಕೃನ್ನಾಮ ಸಂವತ್ಸರಕ್ಕೆ
ದ್ವಾಪರಯುಗ ದೀಕ್ಷೆಯನ್ನು ಕೊಡಬಹುದು.
ಶೋಭಕೃನ್ನಾಮ ಸಂವತ್ಸರಕ್ಕೆ
ನಾವು, ನೀವುಗಳು ಕಲಿಯುಗದ
ದೀಕ್ಷೆಯನ್ನು ಕೊಟ್ಟುಕೊಂಡಿರಬಹುದು.
ಈ ವರುಷದ ತುಂಬೆಲ್ಲ
ಅದೇನೇ ಆಗಲಿ, ಅದೇನೇ ಹೋಗಲಿ
“ನಾವು ಮಾತ್ರ ಬದುಕಬೇಕು,
ನಮಗೆ ನಮ್ಮ ಬದುಕು, ಬಾಳು ಮುಖ್ಯ.
ಇದು ಕಾರಣ, ನಾವು ಸುಳ್ಳಿನ ಜೊತೆ
ಮತ್ತು ಸುಳ್ಳುಹೇಳುವವರ ಜೊತೆ
ಒಪ್ಪಂದ ಮಾಡಿಕೊಂಡಿರುತ್ತೇವೆ”
ಎನ್ನುವವರು ಶೋಭಕೃನ್ನಾಮ
ಸಂವತ್ಸರಕ್ಕೆ ಕಲಿಯುಗ ದೀಕ್ಷೆಯನ್ನು
ಕೊಟ್ಟುಕೊಂಡಿರಬಹುದು.
ನೂತನ ಸಂವತ್ಸರದ ಆಗಮನವೇನೋ
ಕಾಲನಿರ್ಣಯಕ್ಕೆ ಒಳಪಟ್ಟಿದೆ.
ಸಂವತ್ಸರಕ್ಕೆ ಯುಗದೀಕ್ಷೆಯನ್ನು
ಕೊಟ್ಟುಕೊಂಡಿರುವುದು
ಮತ್ತು ತತ್ಕಾಲೀನ ಯುಗಧರ್ಮಗಳನ್ನು
ಅಳವಡಿಸಿಕೊಂಡಿರುವುದು
ನಮ್ಮ, ನಿಮ್ಮಗಳ ನಿರ್ಣಯ
ಮತ್ತು ನಿರ್ಧಾರಗಳಿಗೆ ಒಳಪಟ್ಟಿದೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತಪೋವನ, ತುಮಕೂರು
Comments
Post a Comment